ಭಾನುವಾರ, ಆಗಸ್ಟ್ 15, 2010

ಸ್ವತಂತ್ರ ಸಮರದ ಮುಂಬೆಳಗು: ಕಿತ್ತೂರು ಚೆನ್ನಮ್ಮ

ಪ್ರಥಮ ಸ್ವತಂತ್ರ ಸಂಗ್ರಾಮವೆಂದು ಇಂದಿನ ಪಂಡಿತರು ಕರೆಯುವ ೧೮೫೭ರ ದಂಗೆಗೆ ಕಾಲು ಶತಮಾನ ಮೊದಲೆ ಸ್ವಾತಂತ್ರ ಯುದ್ಧದ ಕಿಡಿಹೊತ್ತಿಸಿದವಳು, ನಮಗೆಲ್ಲ ಸ್ವಾತಂತ್ರ್ಯ ದೇವತೆಯೇ ಆಗಿ ಹೋಗಿರುವ ಕಿತ್ತೂರು ಚೆನ್ನಮ್ಮ. ಅಗಸ್ಟ್ ೧೫ರ ಈ ದಿನ ಬೆಂಗಳೂರಿನ ಅವಳ ಮೂರ್ತಿಗೆ ನಮಿಸಿ ಕೃತಾರ್ಥರಾಗೋಣ ಬನ್ನಿ.





ಚೆನ್ನಮ್ಮ ಹುಟ್ಟಿದ್ದು ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಕಿತ್ತೂರಿನ ದೇಸಾಯಿ ಮಲ್ಲಸರ್ಜನ ದೊರೆಗೆ ಎರಡನೆ ಹೆಂಡತಿಯಾದ ಚೆನ್ನಮ್ಮ ಅಂದಿನ ರಾಜಕಾರಣದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದಳು.

ಕಿತ್ತೂರಿನಂತಹ ಸಂಸ್ಥಾನಗಳಿಗೆ ಅಂದು ಬಹಳ ಸೂಕ್ಷ್ಮದ ಕಾಲವಾಗಿತ್ತು. ಪೇಶವಾಯಿ, ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿಯರ ನಡುವೆ ತಮ್ಮ ಉಳಿವಿಗಾಗಿ ಈ ಸಂಸ್ಥಾನಗಳು ಹತ್ತು ಹಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿತ್ತು. ಇಷ್ಟರ ನಡುವೆ ಈಸ್ಟ್ ಇಂಡಿಯಾ ಕಂಪನಿಯೂ ಸೇರಿಕೊಂಡು ಈ ಸಂಸ್ಥಾನಗಳಿಗೆ ಪ್ರಾಣಸಂಕಟ ತಂದೊಡ್ಡಿತ್ತು.

ಕಿತ್ತೂರಿನ ದೇಸಾಯಿ ಮಲ್ಲಸರ್ಜನು ಕೊನೆಯುಸಿರನ್ನೆಳೆದಾಗ, ಅವನ ಮೊದಲ ಹೆಂಡತಿಯ ಮಗ ಶಿವಲಿಂಗ ರುದ್ರಸರ್ಜನು ಪಟ್ಟಕ್ಕೆ ಬಂದ. ಅಲ್ಪಾಯುವಾಗಿದ್ದ ಶಿವಲಿಂಗರುದ್ರಸರ್ಜನು ೧೧ ಸಪ್ಟಂಬರ ೧೮೨೪ರಂದು ವಾರಸದಾರರಿಲ್ಲದೆ ತೀರಿಕೊಂಡನು. ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡಿದ್ದ. ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ಮಾನ್ಯ ಮಾಡಲಿಲ್ಲ. ೧೩ ಸಪ್ಟಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡಿ, ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕಿದ.

ಈ ಕಠಿಣ ಪರಿಸ್ಥಿತಿಯಲ್ಲಿ ಚೆನ್ನಮ್ಮ ಎದೆಗುಂದದೆ ರಾಜನಿಷ್ಠರಾದ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು.ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಳು. ಅದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೇ ಅಪೇಕ್ಷಿಸಿದಾಗ, ಚೆನ್ನಮ್ಮ ಮುಂದಾಲೋಚನೆಯಿಂದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಸಹ ಮಾಡಿದಳು. ೨೧ ಅಕ್ಟೋಬರ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು.

ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆದು, ಒಪ್ಪಂದದಂತೆ ೧೮೨೪ ಡಿಶಂಬರ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಯಿತು. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ದಿಶಂಬರ ೩ ರಂದು ಅಪಾರ ಸೈನ್ಯದೊಂದಿಗೆ ಮತ್ತೊಮ್ಮೆ ಕಿತ್ತೂರಿಗೆ ದಾಳಿ ಮಾಡಿದರು. ಈ ಎರಡನೇ ಯುದ್ಧದಲ್ಲಿ ಡಿಶಂಬರ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾದರೆ, ಡಿಶಂಬರ ೫ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾದಳು. ಡಿಶಂಬರ ೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ದರು. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೫ ಫೆಬ್ರುವರಿ ೨ ರಂದು ನಿಧನಹೊಂದಿದಳು.

ಚೆನ್ನಮ್ಮ ಸೆರೆಯಾಗಿ, ನಿಧನವಾದರೂ ಆಕೆಯ ಬಂಟರು ಸ್ವಾತಂತ್ರ್ಯದ ದಾಹ ತೀರಿಸಿಕೊಳ್ಳಲು ತಮ್ಮ ಪ್ರಯತ್ನ ಮುಂದುವರಿಸಿಯೇ ಇದ್ದರು. ಅಂತಹ ಒಬ್ಬ ಬಂಟನಾಗಿದ್ದ ಸಂಗೊಳ್ಳಿಯ ರಾಯಣ್ಣನದು ಇಂದು ಜನುಮದಿನ. ಆ ಮಹಾತ್ಮನಿಗೂ ನಮ್ಮ ನಮನವಿರಲಿ.
 
ಸ್ವಾತಂತ್ರ್ಯ ದೇವಿ ಚೆನ್ನಮ್ಮನ ಮೂರ್ತಿಗಳು ನಾಡಿನ ಅಲ್ಲಲ್ಲಿ ಇವೆ:




ಹುಬ್ಬಳ್ಳಿಯಲ್ಲಿ:



ಗದುಗಿನಲ್ಲಿ:



ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿರುವ ಗೋಡೆಶಿಲ್ಪ:



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ