ಗುರುವಾರ, ಸೆಪ್ಟೆಂಬರ್ 9, 2010

ಮಾದರಿ ಗುರು ಎಮ್. ವಿ. ಸೀತಾರಾಮಯ್ಯ.

   ಮೊನ್ನೆಯೇ ಶಿಕ್ಷಕರ ದಿನವನ್ನು ಆಚರಿಸಿದ ಖುಷಿ ಹಾಗೆ ಇರುವಾಗಲೇ ಇವತ್ತು ಮತ್ತೊಬ್ಬ ಗುರುವಿನ ಜನ್ಮದಿನ ಬಂದಿದೆ. ಹೌದು ಇಂದು (ಸೆಪ್ಟೆಂಬರ್ ೯) ಮಾದರಿ ಶಿಕ್ಷಕ ಎಂದೇ ಪ್ರಸಿದ್ಧರಾದ ಎಮ್. ವಿ. ಸೀತಾರಾಮಯ್ಯನವರ ಜನ್ಮದಿನ. ಬನ್ನಿ ತನ್ನಿಮಿತ್ತ ಎನ್‌ಆರ್ ಕಾಲನಿಯಲ್ಲಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ.

ಎಮ್. ವಿ. ಸೀತಾರಾಮಯ್ಯನವರು ೧೯೧೦ ರ ಸೆಪ್ಟೆಂಬರ್ ೯ ರಂದು ಮೈಸೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಮ್ ಎ ಪದವಿಯನ್ನು ಪಡೆದ ಸೀತಾರಾಮಯ್ಯನವರು ಕೆಲ ಕಾಲ ಅದೆ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ- ಕನ್ನಡ ಶಬ್ದಕೋಶದ ಕೆಲಸದಲ್ಲಿ ಸಂಶೋದಕ ಸಹಾಯಕರಾಗಿ ಸೇರಿ ನಂತರ ಬೆಂಗಳೂರಿನ ಸರಕಾರಿ ಕಲಾ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಪ್ರಾರಂಭಿಸಿದರು. ಆ ಸಮಯದಲ್ಲಿ ಬಿಎಮ್‌ಶ್ರಿ, ಟಿಎಸ್ ವೆಂಕಣ್ಣಯ್ಯ, ಎ ಆರ್ ಕೃಷ್ಣಶಾಸ್ತ್ರಿ ಮುಂತಾದ ಘಟಾನುಘಟಿಗಳ ಪ್ರಭಾವದಲ್ಲಿ ಬಂದ ಸೀತಾರಾಮಯ್ಯನವರು ಒಳ್ಳೆಯ ಸಂಶೋಧಕರಾಗಿ  ಸಾಹಿತಿಯಾಗಿ ಅದೆಲ್ಲಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳ ಅಚ್ಚಿಮೆಚ್ಚಿನ ಪ್ರಾಧ್ಯಾಪಕರಾಗಿ ಪ್ರಸಿದ್ಧರಾದರು.

ರಾಘವ ಎಂಬ ಅಂಕಿತದಿಂದ ಬರೆಯುತ್ತಿದ್ದ ಸೀತಾರಾಮಯ್ಯನವರಿಂದ ಸುಮಾರು ಒಂದು ನೂರು ಕೃತಿಗಳು ರಚಿಸಲ್ಪಟ್ಟಿವೆ.  ಸಾಹಿತ್ಯಿಕ ಕೃತಿಗಳಂತೆಯೆ ಅವರ ಸಂಶೋದನಾತ್ಮಕ ಕೃತಿಗಳು ಹೆಚ್ಚು ಪ್ರಸಿದ್ಧವಾಗಿವೆ. ಅದರಲ್ಲೂ ಕನ್ನಡ ವ್ಯಾಕರಣಕ್ಕೆ ಸಂಭಂದಿಸಿದಂತೆ ಅವರ ಕೃತಿ ವಿಷಿಷ್ಟವಾಗಿದ್ದು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡದ ಹಳೆಯ ಗ್ರಂಥಗಳಾದ ಶಬ್ದಮಣಿದರ್ಪಣ ಮತ್ತು ಕವಿರಾಜಮಾರ್ಗದ ಬಗೆಗಿನ ಅವರ ಸಂಶೊಧನ ಲೇಖನಗಳು ಆ ಕಾಲದಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದವು. ಇದಲ್ಲದೇ ಅವರು ಹಲವು ಹಸ್ತಪ್ರತಿಗಳ ಸಂಗ್ರಹ ಮತ್ತು ಸಂಶೋಧನೆಗಳನ್ನು ಮಾಡಿದರು.
ತಮ್ಮ ನಿವೃತ್ತಿಯ ನಂತರ ತಮ್ಮ ಮೆಚ್ಚಿನ ಗುರು ಬಿಎಮ್‌ಶ್ರೀ ಯವರ ಹೆಸರಿನಲ್ಲಿ ಬಿಎಮ್‌ಶ್ರೀ ಪ್ರತಿಷ್ಠಾನವನ್ನು ಆರಂಭಿಸಿ ಅದರ ಏಳ್ಗೆಗೆ ಶ್ರಮಿಸಿದರು. ಸೀತಾರಾಮಯ್ಯನವರ ಸ್ವಗೃಹದಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಬಿಎಮ್‌ಶ್ರೀ ಪ್ತತಿಷ್ಠಾನ ಈಗ ೩೦ ವರ್ಷಗಳನ್ನು ಪೂರೈಸಿದ್ದು, ಸಂಶೋಧನೆ ಮತ್ತು ಹಸ್ತಪ್ರತಿ ಅಭ್ಯಾಸಿಗಳಿಗೆ ಉಚ್ಚ ಶಿಕ್ಷಣ ನೀಡುತ್ತಿದೆ.
ಒಳ್ಳೆಯ ವೀಣಾವಾದಕರು ಮತ್ತು ವರ್ಣಕಲಾವಿದರೂ ಆಗಿದ್ದ ಸೀತಾರಾಮಯ್ಯನವರು ಮಾರ್ಚ್ ೧೨ ೧೯೯೦ರಲ್ಲಿ ತೀರಿಕೊಂಡರು.

1 ಕಾಮೆಂಟ್‌: