ಸೋಮವಾರ, ಅಕ್ಟೋಬರ್ 4, 2010

'ನಾಡಗೀತೆಯ' ಹುಯಿಲಗೋಳ ನಾರಾಯಣರಾಯರು

ಇಂದು ಅಕ್ಟೋಬರ್ ೪ , ನಮಗೆ ಮೊದಲ ನಾಡಗೀತೆ ಕೊಟ್ಟ ಹುಯಿಲಗೋಳ ನಾರಾಯಣರಾಯರ ಹುಟ್ಟುಹಬ್ಬ. ಗದುಗಿನಲ್ಲಿರುವ ಅವರ ಮೂರುತಿ ನಮಿಸಿ ಗೌರವ ಸಲ್ಲಿಸೋಣ ಬನ್ನಿ.



ನಾರಾಯಣರಾಯರು ಜನಿಸಿದ್ದು ೧೮೮೪ ಅಕ್ಟೋಬರ್ ೪ ರಂದು .. ತಂದೆ-ತಾಯಿ ಕೃಷ್ಣರಾವ್ ಮತ್ತು ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, ಮುಂಬೈಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಇವರ ಅನೇಕ ಕವನಗಳು ಅಂದಿನ ಪತ್ರಿಕೆಗಳಾದ ಜೈ ಕರ್ನಾಟಕ ವೃತ್ತ , ಪ್ರಭಾತ , ಧನಂಜಯ ಮೊದಲಾದವುಗಳಲ್ಲಿ ಪ್ರಕಟವಾಗಿವೆ.

ನಾರಾಯಣರಾಯರು ತಮ್ಮ ನಾಟಕಗಳಿಗಾಗಿ ಗೀತೆಗಳನ್ನು ರಚಿಸಿದ್ದರು. ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು " ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಆಗಿನ್ನೂ ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಈ ಗೀತೆಯನ್ನು ಅಂದು ಹಾಡಿದ್ದರು.

ಹಲವಾರು ಸಂಘಟನೆಗಳಲ್ಲಿ ಸಕ್ರೀಯರಾಗಿದ್ದ ರಾಯರು, ಗದುಗಿನ ವಿದ್ಯಾದಾನ ಸಮಿತಿಯ ಪ್ರೌಢಶಾಲೆ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
 
ಕವಿಯ ಹುಟ್ಟುಹಬ್ಬದಂದು ಅವರ ಆ ಪ್ರಖ್ಯಾತ ಕವನವನ್ನು ಗುನುಗೋಣ ಬನ್ನಿ:


ಈ ವಿಡಿಯೋ ಒಂದು ಪ್ರಯೋಗ, ತಪ್ಪುಗಳಿಗೆ ಕ್ಷಮೆ ಇರಲಿ.. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ