ಬುಧವಾರ, ಸೆಪ್ಟೆಂಬರ್ 15, 2010

ಅಭಿಜಾತ ಅಭಿಯಂತ: ಸರ್ ಎಮ್.ವಿಶ್ವೇಶ್ವರಯ್ಯ

ಇಂದು "ಇಂಜನೀಯರ್ ದಿನ", ಅದೇ ನಮ್ಮ ನೆಚ್ಚಿನ ಇಂಜನೀಯರ್-ದಿವಾನರು-ಮಹಾಮುತ್ಸದ್ಧಿ ಸರ್ ಎಮ್.ವಿಶ್ವೇಶ್ವರಯ್ಯನವರ ೧೫೦ ನೇ ಹುಟ್ಟುಹಬ್ಬ. ಈ ಸುದಿನದಂದು ಕೃಷ್ಣರಾಜೆಂದ್ರ ವೃತ್ತದಲ್ಲಿರುವ ಅವರ ಮೂರ್ತಿಗೆ ನಮಿಸೋಣ ಬನ್ನಿ.

ವಿಶ್ವೇಶ್ವರಯ್ಯನವರ ಈ ಮೂರ್ತಿ ಸ್ಥಾಪನೆಯಾದದ್ದು ೧೯೭೦ರಲ್ಲಿ.

ವಿಶ್ವೇಶ್ವರಯ್ಯನವರು ಹುಟ್ಟಿದ್ದು ಸೆಪ್ಟೆಂಬರ್ ೧೫, ೧೮೬೦ರಂದು ಬೆಂಗಳೂರಿನಿಂದ ೪೦ ಮೈಲಿ ದೂರದಲ್ಲಿರುವ ಮುದ್ದೇನಹಳ್ಳಿಯಲ್ಲಿ. ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಾಚಮ್ಮ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಇಂಜನೀಯರ್ರಾಗಿ :

ಶಿಕ್ಷಣದ ನಂತರ ಅವರು ಮುಂಬೈ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ಇದರ ನಂತರ ಭಾರತೀಯ ನೀರಾವರಿ ಕಮಿಷನ್ ಅನ್ನು ಸೇರಿ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು.

ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡುಹಿಡಿದು ಅದಕ್ಕಾಗಿ ಪೇಟೆಂಟ್ ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ ಖಡಕ್ವಾಸ್ಲಾ ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು ಮತ್ತು ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು.

ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಅವರು ಅಳವಡಿಸಿದ ಪ್ರವಾಹ ರಕ್ಷಣಾ ವ್ಯವಸ್ಥೆ ಅವರ ಪ್ರಸಿದ್ಧಿಯನ್ನು ಹೆಚ್ಚಿಸಿತ್ತು.

ಕನ್ನಡನಾಡಿಗೆ ಸರ್ ಎಮ್.ವಿ ಯವರ ಕೊಡುಗೆ:

ಮೈಸೂರು ರಾಜ್ಯದ ಮುಖ್ಯ ಇಂಜನೀಯರು ಆಗಿ, ನಂತರ ದಿವಾನರಾಗಿ, ಅದರ ನಂತರ ಹಲವಾರು ಲಾಭ-ರಹಿತ ಹುದ್ದೆಗಳಲ್ಲಿ ಕನ್ನಡ ನಾಡಿನ ಸೇವೆಗೈದ ವಿಶ್ವೇಶ್ವರಯ್ಯನವರ ಕೆಲ ಮುಖ್ಯ ಕೊಡುಗೆಗಳು:
  • ಕೃಷ್ಣರಾಜಸಾಗರದ ನಿರ್ಮಾಣ.
  • ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅದರ ಅಭಿವೃದ್ಧಿಗೆ ಕೊಡುಗೆ.
  • ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ.
  • ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ
  • ಮೈಸೂರು ಬ್ಯಾಂಕ್ ಸ್ಥಾಪನೆ.
  • ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ
  • ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ.
  • ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
  • ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ.

ವಿಶ್ವೇಶ್ವರಯ್ಯನವರ ಪ್ರಾಮಾಣಿಕತೆ, ವೃತ್ತಿಪರತೆಗಳು ದಂತೆಕತೆಗಳಾಗಿ ಹೋಗಿವೆ. ಅಂತಹ ಮಹಾತ್ಮನ ಹಲವು ಮೂರ್ತಿಗಳು ನಾಡಿನ ಹಲವೆಡೆ ಇವೆ:

ಧಾರವಾಡದ  ಇನ್ಸ್ಟಿಟ್ಯೂಟ್ ಆಫ಼್ ಇಂಜನೀಯರ್ಸ್ ಆವರಣದ ಎದುರುಗಡೆ ಇರುವ ಮೂರ್ತಿ:

ಬೆಂಗಳೂರಿನ ವಿಶ್ವೇಶ್ವರಪುರದಲ್ಲಿರುವ ಮೂರ್ತಿ:



ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದಲ್ಲಿರುವ ಮೂರ್ತಿ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ