ಮಂಗಳವಾರ, ಜೂನ್ 1, 2010

ಅವ್ವಾ ಇವರ‍್ಯಾರ? ದಿವಾನ್ ಶೇಷಾದ್ರಿ ಐಯ್ಯರ!

ದಿವಾನ್ ಶೇಷಾದ್ರಿ ಐಯ್ಯರ್ ಅವರು ಓಡೆಯರ ಕಾಲದಲ್ಲಿ ಮೈಸೂರಿನ ದಿವಾನರಾಗಿದ್ದರು. ತಮ್ಮ ಆಡಳಿತಾವಧಿಯಲ್ಲಿ ಬೆಂಗಳೂರಿನ ಸರ್ವೊತೊಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಆಧುನಿಕ ಬೆಂಗಳೂರಿನ ಶಿಲ್ಪಿಯೆಂದೇ ಪ್ರಸಿದ್ಧರಾಗಿದ್ದಾರೆ. ಇವತ್ತು (ಜೂನ್ ೧) ಅವರ ಹುಟ್ಟಿದ ದಿನ. ಬನ್ನಿ ಕಬ್ಬನ್ ಉದ್ಯಾನವನದಲ್ಲಿರುವ ಅವರ ಮೂರ್ತಿಗೆ ಪೂಜೆ ಸಲ್ಲಿಸೋಣ.



ಈ ಮೂರ್ತಿಯನ್ನು ನವಂಬರ್ ೨೦, ೧೯೧೩ರಲ್ಲಿ ಸ್ಥಾಪಿಸಲಾಗಿದೆ.

ದಿವಾನ್ ಶೇಷಾದ್ರಿ ಐಯ್ಯರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದಲ್ಲಿ ಮೈಸೂರಿನ ದಿವಾನರಾಗಿ ( ೧೮೮೩ ರಿಂದ ೧೯೦೧ ರವರೆಗೆ) ಕೆಲಸ ಮಾಡಿದರು. ೧೮೯೮ರಲ್ಲಿ ಬೆಂಗಳೂರು ಪ್ಲೇಗ್‌ನಿಂದ ತತ್ತರಿಸಿದಾಗ ಊರಿನ ಸ್ವಚ್ಚತೆಯ ಬಗ್ಗೆ ಗಮನ ಹರಿಸಿ ಜನರಲ್ಲಿ ನೈರ್ಮಲ್ಯ ಮತ್ತು ಆರೊಗ್ಯದ ಬಗೆಗಿನ ಕಾಳಜಿಯನ್ನು ಹೆಚ್ಚಿಸಿದರು. ಹಲವು ಕಡೆ ಚರಂಡಿಗಳನ್ನು ತೋಡಿಸಿದರು. ರಸ್ತೆಗಳನ್ನು ಅಗಲಗೊಳಿಸಿದರು. ೧೮೯೪ ರಲ್ಲಿ ಬೆಂಗಳೂರಿಗೆ ಪ್ರಥಮ ಬಾರಿಗೆ ಹೆಸರಘಟ್ಟದ ಕೆರೆಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿದರು.

ಕೊಲಾರದಲ್ಲಿ ಚಿನ್ನದಗಣಿ ಪ್ರಾರಂಭವಾಗಿದ್ದು ಇವರು ದಿವಾನರಾಗಿದ್ದ ಕಾಲದಲ್ಲಿಯೇ. ಇಷ್ಟೆ ಅಲ್ಲದೆ ಏಶಿಯಾದಲ್ಲಿಯೇ ಪ್ರಥಮ ಜಲ ವಿದ್ಯುತ ಕಾರ್ಯಗಾರವನ್ನು ಶಿವನಸಮುದ್ರದಲ್ಲಿ ಪ್ರಾರಂಭಿಸಲು ಶೇಷಾದ್ರಿ ಐಯ್ಯರ್ ಅವರು ಕಾರಣಿಭೂತರಾದರು.

ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆ ಪ್ರಾರಂಭಿಸಿದ್ದು, ಲಾಲಬಾಗ್‌ನ ಗಾಜಿನಮನೆಕಟ್ಟಿಸಿದ್ದು , ಬಸವನಗುಡಿ ಮತ್ತು ಮಲ್ಲೇಶ್ವರ ಬಡಾವಣೆಗಳ ವಿಸ್ತರಣೆ ಮಾಡಿದ್ದು ನಮ್ಮ ಈ ಆಧುನಿಕ ಬೆಂಗಳೂರಿಗೆ ಶೇಷಾದ್ರಿ ಐಯ್ಯರ್ ಅವರ ಕಾಣಿಕೆ. ಅಲ್ಲದೆ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲು ಮಹಾರಾಜರಿಂದ ೩೭೨ ಎಕರೆಯಷ್ಟು ಭೂಮಿಯನ್ನು ದಾನವಾಗಿ ಕೊಡಿಸಿದ್ದು ಶೇಷಾದ್ರಿ ಐಯ್ಯರ್ ಅವರ ಹೆಗ್ಗಳಿಕೆ.



ಶೇಷಾದ್ರಿ ಐಯ್ಯರ್ ಅವರು ಸೆಪ್ಟೆಂಬರ್ ೧೩, ೧೯೦೧ರಲ್ಲಿ ತೀರಿಕೊಂಡರು.


ಅವರ ನೆನೆಪಿಗಾಗಿ ಬೆಂಗಳೂರಿನ ಒಂದು ಬಡಾವಣೆಗೆ ಶೇಷಾದ್ರಿಪುರಂ ಏಂದು ನಾಮಕರಣ ಮಾಡಲಾಗಿದೆ. ಅವರ ಖಾಸಗಿ ಮನೆ ’ಕುಮಾರ ಕೃಪಾ’ ಈಗ ರಾಜ್ಯದ ಅತಿಥಿ ಗೃಹವಾಗಿ ಬಳಕೆಯಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ