ಭಾನುವಾರ, ಮೇ 9, 2010

ಎರಡನೆಯ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿಯವರು

ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾದವರು ಎಸ್.ಜಿ.ಬಾಳೆಕುಂದ್ರಿಯವರು . ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರಾಗಿ ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆಗಳಿಂದಾಗಿ ಪ್ರಸಿದ್ಧರಾಗಿರುವ ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿಯವರ ಮೂರ್ತಿಯೊಂದು ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ಆವರಣದಲ್ಲಿದೆ. ಬನ್ನಿ, ಬಾಳೆಕುಂದ್ರಿಯವರ ಕೊಡುಗೆಯನ್ನು ನೆನಪಿಸಿಕೊಂಡು ಅವರ ಮೂರ್ತಿಪೂಜೆ ಮಾಡೋಣ.



ಈ ಮೂರ್ತಿಯ ಸ್ಥಾಪನೆಯಾದದ್ದು ೨೭ನೇ ನವಂಬರ್ ೨೦೦೩ರಂದು.





ಬಾಳೆಕುಂದ್ರಿಯವರ ಜನನವಾದದ್ದು ೧೯೨೨ ಮೇ ೫ರಂದು, ಬೆಳಗಾವಿಯಲ್ಲಿ . ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ.



ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯಲ್ಲಿ ಮುಗಿಸಿ, ಬಾಳೆಕುಂದ್ರಿಯವರು ಬೆಳಗಾವಿಯಲ್ಲಿ ಹೈಸ್ಕೂಲು ಮತ್ತು ಪದವೀಪೂರ್ವ ಶಿಕ್ಷಣ ಮುಗಿಸಿದರು. ನಂತರ ಪುಣೆಯ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು ೧೯೪೪ರಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿ ಪಡೆದರು.

೧೯೪೫ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆಗಿ ವೃತ್ತಿ ಜೀವನವನ್ನು ಶುರುಮಾಡಿದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಉಸ್ತುವಾರಿಯನ್ನು ನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ, ಆ ಬಳಿಕ ಧೂಲಿಯಾ ಆಣೆಕಟ್ಟು ಹೀಗೆ ಹಲವು ಕಡೆ ಕರ್ತವ್ಯ ನಿರ್ವಹಿಸಿದರು.

ಆ ನಂತರ ಇವರು ಸೇವೆಯನ್ನು ಕೇಂದ್ರ ಸರಕಾರದ ಪ್ಲ್ಯಾನಿಂಗ್ ಕಮಿಶನ್ನಿನಲ್ಲಿ ಕೆಲಸಮಾಡುತ್ತಿದ್ದಾಗ, ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ನಾಯಕರನ್ನು ಎಚ್ಚರಿಸಿದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಕರೆಯಿಸಿಕೊಂಡರು. ೧೯೫೯ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು, ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು.

ನಿವೃತ್ತಿಯ ನಂತರ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ