ಭಾನುವಾರ, ಜುಲೈ 12, 2020

ಕರ್ನಾಟಕದ ಪ್ರಾಣೋಪಾಸಕ ಆಲೂರು ವೆಂಕಟರಾಯರು


ಇವತ್ತು ಜುಲೈ ೧೨, ಕರ್ನಾಟಕದ ಪ್ರಾಣೋಪಾಸಕ,  ಕರ್ನಾಟಕ ಕುಲಪುರೋಹಿತ ಶ್ರೀ ಆಲೂರು ವೆಂಕಟರಾಯರು ಹುಟ್ಟಿದ ದಿನ. ಧಾರವಾಡದ ಆಲೂರು ಪ್ರತಿಷ್ಠಾನದಲ್ಲಿರುವ ಅವರ ಮೂರ್ತಿಗೆ ನಮಿಸಿ ಮೂರ್ತಿಪೂಜೆ ಮಾಡಿ, ಅವರನ್ನು ಈ ಚಿಕ್ಕ ಬರಹದಲ್ಲಿ ನೆನೆಸಿಕೊಳ್ಳೋಣ ಬನ್ನಿ.
 

ಆಲೂರು ವೆಂಕಟರಾಯರು೧೮೮೦ ,ಜುಲೈ ೧೨ರಂದು ವಿಜಯಪುರದಲ್ಲಿ ಜನಿಸಿದರು. ಇವರ ತಂದೆ ಭೀಮರಾಯರು, ತಾಯಿ ಭಾಗೀರಥಮ್ಮ. ಧಾರವಾಡದಲ್ಲಿ ಆರಂಭದ ಶಿಕ್ಷಣ ಮುಗಿಸಿದ ವೆಂಕಟರಾಯರು ಪುಣೆಯ ಫರ್ಗ್ಯೂಸನ್ ಕಾಲೇಜಿನಿಂದ ೧೯೦೩ರಲ್ಲಿ ಬಿ.ಎ. ಪದವಿ , ೧೯೦೫ರಲ್ಲಿ ಮುಂಬಯಿಯಲ್ಲಿ ಎಲ್.ಎಲ್.ಬಿ. ಪದವಿಯನ್ನು ಗಳಿಸಿ, ಧಾರವಾಡಕ್ಕೆ ಮರಳಿದರು.

 

ಆ ಕಾಲದಲ್ಲಿ ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮರಾಠಿಯದೆ ಪ್ರಾಬಲ್ಯ. ಈ ಭಾಗಕ್ಕೂ ಸದರ್ನ್‌ ಮರಾಠಾ ಕಂಟ್ರಿ ಎಂದೇ ಹೆಸರು. ಸರಕಾರಿ ಕೆಲಸಗಳಲ್ಲಿ ಮರಾಠಿಗರ ಮೆರೆದಾಟ. ಕನ್ನಡಿಗರು ತಮಗೆ ದಕ್ಕಿದ ಎರಡನೆ ದರ್ಜೆಯನ್ನು ಒಪ್ಪಿಕೊಂಡು ಮರಾಠಿಯನ್ನು ಹೊತ್ತು ಮೆರೆಯುವ ತೊತ್ತುಗಳಾಗಿದ್ದರು. ಒಮ್ಮೆ ಪ್ರವಾಸಕ್ಕೆಂದು ಹಂಪೆಗೆ ಹೋದಾಗ ಅಲ್ಲಿಯ ಹಾಳು ಹಂಪೆಯ ಅವಶೇಷಗಳನ್ನು ನೋಡಿ, ಕರ್ಣಾಟಕ ಸಾಮ್ರಾಜ್ಯದ ಗತವೈಭವವನ್ನು ನೆನೆದು, ಕರ್ಣಾಟಕದ ಪುನರುಜ್ಜೀವನಕ್ಕೆ ಶಪಥಮಾಡಿದರು.

ವೃತ್ತಿಯಿಂದ ಅವರು ವಕೀಲರಾದರೂ ತಮ್ಮ ಗುರಿ ಸಾಧನೆಗಾಗಿ ಅವರು ಮಾಡದ ಕೆಲಸವಿಲ್ಲ:

·         ಶ್ರೀ ವಿದ್ಯಾರಣ್ಯ ಚರಿತ್ರೆ, ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಶಿಕ್ಷಣ ಮೀಮಾಂಸೆ, ರಾಷ್ಟ್ರೀಯತ್ವದ ಮೀಮಾಂಸೆ, ಕನ್ನಡಿಗರ ಭ್ರಮನಿರಸನ(ನಾಟಕ), ಕರ್ನಾಟಕತ್ವದ ವಿಕಾಸ, ಕರ್ನಾಟಕತ್ವದ ಸೂತ್ರಗಳು, ಸ್ವಾತಂತ್ರ್ಯಸಂಗ್ರಾಮ ಇತ್ಯಾದಿ ಪುಸ್ತಕಗಳನ್ನು ಬರೆದು ಪ್ರಕಟಿಸಿ ಕನ್ನಡಿಗರ ಸ್ಪೂರ್ತಿಚಿಲುಮೆಯಾಗಿದ್ದರು.

·         ವಾಗ್ಭೂಷಣ, ಜಯಕರ್ನಾಟಕ ಪತ್ರಿಕೆ ಆರಂಭಿಸಿ, ಕನ್ನಡಿಗ, ಕರ್ಮವೀರ ಮೊದಲಾದ ಪತ್ರಿಕೆಗಳ ಸಂಪಾದಕತ್ವವನ್ನು ಕೆಲ ಸಮಯ ವಹಿಸಿಕೊಂಡು ಕನ್ನಡಿಗರ ಜಾಗ್ರತಿಗಾಗಿ ಶ್ರಮಿಸಿದ್ದರು.

·         ಕರ್ನಾಟಕ ವಿದ್ಯಾವರ್ಧಕ ಸಂಘದ ಮೂಲಕ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು, ಸಂಘದ ಆಶ್ರಯದಲ್ಲಿ ಗ್ರಂಥಕರ್ತರ ಸಮಾವೇಶಗಳನ್ನು ನಡೆಸಿದರು. ಅದೇ ಮುಂದೆ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಹಾಡಿತು.

·         ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ವಿಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ ಇತ್ಯಾದಿ ಎಲ್ಲಾ ಯೋಜನೆಗಳಲ್ಲಿ ಅವರದು ಮಹತ್ವದ ಪಾತ್ರ.

·         ಕನ್ನಡಿಗರ ಉದ್ಯಮಶೀಲತೆಯನ್ನು ಉತ್ತೇಜಿಸಲು ತಾವೇ ಸ್ವತಃ ಮತ್ತು ತಮ್ಮ ಸ್ನೇಹಿತರ ಮೂಲಕ ಹಲವಾರು ಉದ್ಯಮಗಳನ್ನು -ಬೆಂಕಿಪೆಟ್ಟಿಗೆ ಕಾರಖಾನೆ, ಪೆನ್ಸಿಲ್ ಕಾರಖಾನೆ, ಉಡುಗೆ ಫ್ಯಾಕ್ಟರಿ ಇತ್ಯಾದಿ- ಪ್ರಾರಂಭಿಸಿದರು.

·         ವೈದ್ಯರಲ್ಲದಿದ್ದರೂ ಆಯೂರ್ವೇದ ಸಮ್ಮೇಳನ, ಸಂಗೀತಗಾರರಲ್ಲದಿದ್ದರೂ ಸಂಗೀತ ಸಮ್ಮೇಳನ, ಕೀರ್ತನಕಾರರಲ್ಲದಿದ್ದರೂ ಕೀರ್ತನ ಸಮಾವೇಶದಲ್ಲಿ  ಶ್ರಮಪಟ್ಟಿದ್ದು ಕನ್ನಡಿಗರ ಸರ್ವತೋಮುಖ ಏಳಿಗೆಗಾಗಿ.

 

ಅವರನ್ನು ಗೌರವದಿಂದ ಕನ್ನಡಿಗ ಜನತೆ “ಕರ್ನಾಟಕದ ಕುಲಪುರೋಹಿತ ಎಂದು ಕರೆದು ಗೌರವಿಸಿದೆ.
ಕರ್ನಾಟಕ ಏಕೀಕರಣದ ಕನಸು ನನಸಾಗಿಸಿ, ಶ್ರೀ ಆಲೂರರು  ಫೆಬ್ರುವರಿ ೨೫, ೧೯೬೪ರಂದು ಜೀವನ ಯಾತ್ರೆ ಮುಗಿಸಿದ್ದರು.
ಅವರ ಹುಟ್ಟುಹಬ್ಬದ ಈ ದಿನ ಅವರ ಸಂದೇಶಗಳನ್ನು ನೆನೆಸಿಕೊಂಡು, ಅದರಂತೆ ನಡೆಯಲು ಸ್ಫೂರ್ತಿ ಪಡೆಯೋಣ.
.

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ