ಗುರುವಾರ, ಆಗಸ್ಟ್ 15, 2019

ಬಾಲ-ಹುತಾತ್ಮ ನಾರಾಯಣ ಡೋಣಿ


ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

ನಾವು ಇಂದು ಈ ಸ್ವಾತಂತ್ರ್ಯವನ್ನು ಅನುಭವಿಸಲು ಹಲವಾರು ಹಿರಿಯರ-ಕಿರಿಯರ ತ್ಯಾಗ ಬಲಿದಾನಗಳು ಕಾರಣವಾಗಿವೆ.

ಇಂದು ಹುಬ್ಬಳ್ಳಿಯ ದುರ್ಗದಬೈಲು ಪ್ರದೇಶದಲ್ಲಿರುವ  ಅಂತಹ ಒಬ್ಬ ಚಿಕ್ಕ ಬಾಲಕನ ಮೂರ್ತಿಗೆ ನಮಿಸಿ, ಅವನನ್ನು ನೆನಪಿಸಿಕೊಂಡು, ಅವನಿಗೆ ಗೌರವ ಸಲ್ಲಿಸೋಣ ಬನ್ನಿ.

೧೯೪೨ ಆಗಸ್ಟ್ ೮ ರಂದು ಕ್ವಿಟ್ ಇಂಡಿಯಾ ಚಳುವಳಿ ಘೋಷಣೆಯಾಗಿ ಕಾಂಗ್ರೆಸ್ಸಿನ ಅನೇಕ ನಾಯಕರ ಬಂಧನವಾಗಿತ್ತು. ಸಾಮಾನ್ಯರಲ್ಲಿಯೇ ಸಾಮಾನ್ಯರು ನಾಯಕತ್ವವಹಿಸಿಕೊಂಡು ಚಳುವಳಿಯನ್ನು ಮುನ್ನಡಿಸಿದರು. ಹೀಗೆಯೇ ಚಳುವಳಿಗಾಗಿ ಹೊರಟು ನಿಂತವನೊಬ್ಬನ  ವಯಸ್ಸು ೧೩, ಹೆಸರು “ನಾರಾಯಣ ಮಹಾದೇವ ಡೋಣಿ". ಓದುತ್ತಿದ್ದುದು  ಹುಬ್ಬಳಿಯ ಲಾಮಿಂಗ್ಟನ್ ಹೈಸ್ಕೂಲ್ ನಲ್ಲಿ.

ಅಂದು ೧೯೪೨ ಆಗಸ್ಟ್ ೧೫. ಅಂದು ಮಹಾತ್ಮರ ನಿಕಟವರ್ತಿಯಾಗಿದ್ದ  ಶ್ರೀ ಮಹಾದೇವ ದೇಸಾಯಿಯವರದು ಬಂಧನದಲ್ಲಿದ್ದಾಗಲೇ  ದೇಹಾಂತವಾಗಿತ್ತು, ಪತ್ರಿಕೆಗಳ ಮೇಲೆ ಪ್ರತಿಬಂಧಕಾಜ್ಞೆ ಇದ್ದುದರಿಂದ ಅಧಿಕೃತ ಮಾಹಿತಿ ಯಾರಿಗೂ ಗೊತ್ತಿರಲಿಲ್ಲ. ಆದರೆ ಆಗಬಾರದ್ದು ಏನೋ ಆಗಿದೆ ಎಂದು ಜನರ ನಡುವೆ ಗುಸುಗುಸು ಇತ್ತು. ಹುಬ್ಬಳ್ಳಿಯ  ಜನ ದುರ್ಗದ ಬಯಲಿಗೆ ಬಂದು ಚಳುವಳಿ ಶುರುಮಾಡಿದರು. ನಾರಾಯಣನೂ  ಸ್ವಾತಂತ್ಯ್ರ ಹೋರಾಟಗಾರರ ಜೊತೆ ಸೇರಿಕೊಂಡ. 'ವಂದೇ ಮಾತರಂ" ,"ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಘೋಷಣೆಗಳೊಂದಿಗೆ ಮೆರವಣಿಗೆ ಹೊರಟಿತು.ಹಾಗೆ ಸಾಗುತ್ತಿದ್ದ ಮೆರವಣಿಗೆಯ ಮೇಲೆ, ಆಂಗ್ಲ ಪೊಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು. ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು, ಆದರೆ ಪುಟ್ಟ ಬಾಲಕ ನಾರಾಯಣ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ" ಘೋಷಣೆ ಕೂಗುತ್ತಲೇ ಇದ್ದ. ಆಗ ಪೋಲೀಸರ ಗುಂಡು ಅವನ ಎದೆಗೆ ತಾಕಿ  ರಕ್ತದ ಮಡುವಲ್ಲಿ ಕುಸಿದು ಬಿದ್ದ, ೧೯೪೨ರ ಚಳುವಳಿಯಲ್ಲಿ ಹುತಾತ್ಮರಾದವರಲ್ಲಿ ಮೊದಲನೆಯವನಾದ. ಅಂದಿನ ಆ ಗೋಲಿಬಾರಿನಲ್ಲಿ ಇನ್ನೂ ಒಂಬತ್ತು ಜನ ಗಾಯಾಳುಗಳಾದರು.

ನಾರಾಯಣ ಕುಸಿದು ಬಿದ್ದ  ದುರ್ಗದಬೈಲಿನಲ್ಲಿರುವ ಆ ಜಾಗದಲ್ಲಿಯೇ ಈ ಮೂರ್ತಿಯನ್ನು ೨೬-೦೧-೨೦೦೦ ರಂದು ಸ್ಥಾಪಿಸಿ, ಅವನ ತ್ಯಾಗವನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥವಾಗಿ ಜೀವ ಕೊಟ್ಟ, ಜೀವ ಸವೆಸಿದ ಅದೆಷ್ಟೋ ದೇಶಭಕ್ತರಿದ್ದಾರೆ ,   ಅವರಿಗೆಲ್ಲ ನಮ್ಮ ಕಣ್ತುಂಬಿದ  ನಮನಗಳು.

(ಡಾ. ಸೂರ್ಯನಾಥ ಕಾಮತರ "ಕರ್ನಾಟಕದಲ್ಲಿ ಕ್ವಿಟ್ ಇಂಡಿಯಾ ಚಳುವಳಿ" ಪುಸ್ತಕದಲ್ಲಿ ಈ ಹುತಾತ್ಮನ ಹೆಸರು "ನಾರಾಯಣ ಮಹಾದೇವ ಡೋಣಿ" ಎಂದಿದ್ದರೆ, ಮೂರ್ತಿಯ ಫಲಕದಲ್ಲಿ "ನಾರಾಯಣ ಗೋವಿಂದಪ್ಪ ಡೋಣಿ" ಎಂದಿದೆ.))

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ