ಭಾನುವಾರ, ಜನವರಿ 3, 2021

ಕನ್ನಡದ ಕಣ್ವ ಬಿಎಂಶ್ರೀ

(ಮೂರ್ತಿ ಇರುವ ಸ್ಥಳ: ನ್ಯಾಷನಲ್ ಕಾಲೇಜು ವೃತ್ತ, ಬಸವನಗುಡಿ, ಬೆಂಗಳೂರು)



ಶ್ರೀಯವರು ಹುಟ್ಟಿದ್ದು, ೧೮೮೧ ನೆ ಇಸವಿಯ ಜನೇವರಿ ಮೂರರಂದು ಮಂಡ್ಯ ಜಿಲ್ಲೆಯ ನಾಗಮಂಡಲ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ. ಹೌದು ಇಂದು ಅವರ ಜನುಮದಿನ. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಯವರು ಬಾಲ್ಯದ ಶಿಕ್ಷಣವನ್ನು ಶ್ರೀರಂಗಪಟ್ಟಣ ಮತ್ತು ಮೈಸೂರಿನಲ್ಲಿ, ತಮ್ಮ ಬಿ. ಎ. ಡಿಗ್ರಿಯನ್ನು ಬೆಂಗಳೂರಿನಲ್ಲಿ ಮುಗಿಸಿ, ಎಮ್. ಎ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದರು. ತಮ್ಮ ೨೫ ನೆಯ ವಯಸ್ಸಿನಲ್ಲಿ ಮಹಾರಾಜ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. ಅವರಿಗೆ ೧೯೩೦ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ವರ್ಗವಾಯಿತು. ಮುಂದೆ ಅವರು ಮೈಸೂರ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡವಿಭಾಗದ ಗೌರವ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು. ೧೯೪೪ ರಲ್ಲಿ ಧಾರವಾಡದ ಕೆ.ಇ. ಬೋರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕೆಲಸಮಾಡಿದರು. ಅದೇ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ವಿದ್ಯಾರಣ್ಯ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇರಿದ ಅವರು ತಮ್ಮ ಕೊನೆಯತನಕ ಅಲ್ಲೇ ಸೇವಾನಿರತರಾಗಿ ಅಲ್ಲಿಯೇ ನಿಧನರಾದರು.

ಸುಮಾರು ೭ ದಶಕಗಳ ಹಿಂದೆ ಕನ್ನಡದ ಸ್ಥಿತಿ ಬಹಳ ಶೋಚನೀಯವಾಗಿತ್ತು. ಅಂತಹ ಕಾಲದಲ್ಲಿ ಒಬ್ಬ ಇಂಗ್ಲೀಷ್ ಪ್ರಾಧ್ಯಾಪಕರಾದ ಶ್ರೀಯವರು, ಇದನ್ನು ತೀವ್ರವಾಗಿ ಮನಗಂಡು, ಕನ್ನಡದ ಏಳಿಗೆಗೆ ಅವಿಶ್ರಾಂತವಾಗಿ ದುಡಿದು ಸಹಸ್ರಾರು ಕನ್ನಡಿಗರ ಹೃದಯದಲ್ಲಿ ಮನೆಮಾಡಿ ’ಕನ್ನಡದ ಕಣ್ವ’ರೆಂದೇ ಕರೆಯಲ್ಪಟ್ಟದ್ದು ನಮಗೆ ಗೊತ್ತೇ ಇದೆ. ಅಂದಿನದು ವಿದ್ವಾಂಸ ಶಿಖಾಮಣಿಗಳಿಗೆ ಮಾತ್ರ ಸೀಮಿತವಾದ ಸಾಹಿತ್ಯ ರಚನೆ. ಛಂದಸ್ಸು ಹಾಗೂ ಕಾವ್ಯ ರಚನೆಯ ಪ್ರಾಕಾರಗಳು, ಬಹಳ ಮಡಿವಂತಿಕೆಗೆ ಹೆಸರಾಗಿದ್ದು ಕಾವ್ಯ ರಚಿಸುವವರಿಗೆ, ನವ ಯುವಕರಿಗೆ ಅದು ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸನ್ನಿವೇಶದಲ್ಲಿ ಶ್ರೀಯವರು ಸರಳ, ಜನಸಾಮಾನ್ಯರ ಹೃದಯವನ್ನು ತಟ್ಟುವ, ಮೀಟುವ ಕಾವ್ಯರಚನೆಗೆ ಮುಂದುವರಿದು, ಕನ್ನಡ ಸಾಹಿತ್ಯಕ್ಕೆ ಹೊಸಮಾರ್ಗ ಕಲ್ಪಿಸಿಕೊಟ್ಟದ್ದು ಶ್ರೀಯವರ ಬಹುದೊಡ್ಡ ಕೊಡುಗೆ. ಕನ್ನಡದ ಏಳಿಗೆಯ ಬಗ್ಗೆ ಶ್ರೀಯವರ ಚಿಂತನೆಗಳು ಇಂದಿಗೂ ಮಹತ್ವ ಉಳಿಸಿಕೊಂಡಿವೆ.

ಅಂದ ಹಾಗೆ ಶ್ರೀಯವರ ಇನ್ನೊಂದು ಬಹುದೊಡ್ಡ ಕೊಡುಗೆ ಅವರ ಶಿಷ್ಯಕೋಟಿ - ಸರ್ವಶ್ರೀ ಕುವೆಂಪು, ಮಾಸ್ತಿ, ಎಸ್.ವಿ.ರಂಗಣ್ಣನವರು, ತೀ ನಂ ಶ್ರೀ, ಜಿ.ಪಿ.ರಾಜರತ್ನಂ. ಡಿ. ಎಲ್. ನರಸಿಂಹಾಚಾರ್, ಎ. ಎನ್. ಮೂರ್ತಿರಾಯರು, ಎಲ್.ಎಸ್. ಶೇಷಗಿರಿರಾಯರು ಮುಂತಾದವರು.

ಶ್ರೀಯವರ ಇನ್ನೊಂದು ಮೂರ್ತಿ ಬಿಎಂಶ್ರೀ ಪ್ರತಿಷ್ಠಾನ, ನರಸಿಂಹರಾಜ ಕಾಲೋನಿ, ಬೆಂಗಳೂರಿನಲ್ಲಿದೆ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ