ಗುರುವಾರ, ಜುಲೈ 18, 2019

ಮೈಸೂರಿನ ಮಹಾಮಹಿಮ ಶ್ರೀ ಜಯಚಾಮರಾಜೇಂದ್ರ ಒಡೆಯರು

ಇಂದು ಮೈಸೂರಿನ ಕೊನೆಯ ಮಹಾರಾಜರಾದ, ಕರ್ನಾಟಕದ (ಅಂದಿನ ಮೈಸೂರು ರಾಜ್ಯದ) ಮೊದಲ ರಾಜ್ಯಪಾಲರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ ನೂರನೆ  ಹುಟ್ಟುಹಬ್ಬ. ಬೆಂಗಳೂರಿನ ಕೃ.ರಾ. ಮಾರುಕಟ್ಟೆಯ ಪ್ರದೇಶದಲ್ಲಿರುವ  ಅವರ ಮೂರ್ತಿಗಳಿಗೆ ನಮಿಸಿ, ಅವರನ್ನು ನೆನಪಿಸಿಕೊಂಡು, ಅವರಿಗೆ ಗೌರವ ಸಲ್ಲಿಸೋಣ ಬನ್ನಿ.

ಇಲ್ಲಿರುವ ಮೊದಲ ಮೂರ್ತಿ ಕೃರಾ ಮಾರುಕಟ್ಟೆ ಬಸ್‌ ನಿಲ್ದಾಣದ ಹತ್ತಿರವಿದೆ,

 
 
ಎರಡನೆಯದು ಬಳೆಪೇಟೆ ವೃತ್ತದಲ್ಲಿದೆ:
 
ಶ್ರೀ ಜಯಚಾಮರಾಜೇಂದ್ರ ಒಡೆಯರು ಹುಟ್ಟಿದ್ದು 1919ರ ಜುಲೈ 18ರಂದು. ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ತಾಯಿ ಕೆಂಪು ಚಲುವಾಜಮ್ಮಣ್ಣಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ದೊಡ್ಡಪ್ಪ, ಮತ್ತು ದತ್ತು ತಂದೆ.

ಶ್ರೀ ಜಯಚಾಮರಾಜೇಂದ್ರ ಒಡೆಯರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಕನ್ನಡ-ಇಂಗ್ಲಿಷ್ ಭಾಷೆಗಳ ಜೊತೆಗೆ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳನ್ನು ಅಭ್ಯಸಿಸಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಐದು ಸುವರ್ಣಪದಕಗಳೊಂದಿಗೆ ಬಿ.ಎ.ಪದವಿ ಪಡೆದರು (1938). 1940ರ ಸೆಪ್ಟೆಂಬರ್ 8ರಂದು ಮೈಸೂರಿನ ಪಟ್ಟಕ್ಕೇರಿದ ಒಡೆಯರು ತಮ್ಮ ಹಿರಿಯರು ತೋರಿದ ಪ್ರಜಾಹಿತದ ಹಾದಿಯಲ್ಲಿಯೇ ಮುಂದುವರಿದರು. ಇವರ ಆಡಳಿತದಲ್ಲಿಯೇ ಶರಾವತಿ ಯೋಜನೆಯಿಂದ ವಿದ್ಯುತ್ ಉತ್ಪಾದನೆ ಶುರುವಾಯಿತು,  ಭದ್ರಾ ಯೋಜನೆ ಕಾರ್ಯಾರಂಭಗೊಂಡಿತು. ಇವರ ಸಮಯದಲ್ಲಿ ಲಲಿತಕಲೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ‘ಜಯಚಾಮರಾಜ ಗ್ರಂಥಮಾಲಾ’ ಎಂಬ ಯೊಜನೆಯ ಅಂಗವಾಗಿ ವೇದಶಾಸ್ತ್ರ, ಪುರಾಣ ಮುಂತಾದ ಉದ್ಗ್ರಂಥಗಳು ಪ್ರಸಿದ್ದ ಪಂಡಿತರಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದುವು. ವಿಶಾಲ ಕರ್ನಾಟಕವಾಗಬೇಕೆಂಬ ಕನಸು ನನಸಾಗುವುದಾದಲ್ಲಿ ತಮ್ಮ ರಾಜತ್ವವನ್ನು ತ್ಯಜಿಸಲೂ ಸಿದ್ಧವೆಂದು ಹೇಳಿದ್ದ ಒಡೆಯರು, ನುಡಿದಂತೆ ನಡೆದು, ನಂತರ 1973ರಲ್ಲಿ ಮೈಸೂರು ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣ ಮಾಡುವ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಧನ್ಯತೆ ಅನುಭವಿಸಿದ್ದರು.

ಬಹುಮುಖ ವ್ಯಕ್ತಿತ್ವದ ಒಡೆಯರು ರಾಜ್ಯಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರ, ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದ್ದರು. ‘ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್’, ‘ದಿ ಗೀತಾ ಅಂಡ್ ಇಂಡಿಯಾನ್ ಕಲ್ಚರ್’, ‘ಭಾರತೀಯ ಸೌಂದರ್ಯಶಾಸ್ತ್ರದ ಹಲವು ಮುಖಗಳು’, ‘ದಿ ರಿಲಿಜನ್ ಅಂಡ್ ದಿ ಮ್ಯಾನ್’, ‘ಆತ್ಮ ಮತ್ತು ಬ್ರಹ್ಮ’ ಇತ್ಯಾದಿ ಗ್ರಂಥಗಳ ಲೇಖಕರೂ ಹೌದು. ಒಳ್ಳೆಯ ಕುದುರೆ ಸವಾರ, ಟೆನಿಸ್ ಆಟಗಾರ, ಪಿಯಾನೋ ವಾದಕರಾಗಿದ್ದ ಅವರು, ಹಲವಾರು ಕೀರ್ತನೆಗಳನ್ನೂ ರಚಿಸಿದ್ದಾರೆ. ಭಾರತೀಯ ವನ್ಯಮೃಗಗಳ ಮಂಡಳಿಯ ಅಧ್ಯಕ್ಷರಾಗಿ, ವಿಹಿಂಪದ ಸ್ಥಾಪಕ ಅಧ್ಯಕ್ಷರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದರು.
ಸ್ವಾತಂತ್ರ್ಯಾನಂತರ ಒಡೆಯರು ಮೈಸೂರಿನ ರಾಜಪ್ರಮುಖರಾಗಿ, ತದನಂತರ ಮೈಸೂರು ಮತ್ತು ಮದ್ರಾಸುಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ,  ಅನೇಕ ಸಾರ್ವಜನಿಕ ಸಂಸ್ಥೆಗಳಿಗೆ ಉದಾರ ದಾನ ನೀಡಿ ಪೋಷಿಸಿದ್ದರು. ಅವರ ಕೊಡುಗೆಯನ್ನು ಗಮನಿಸಿ ವಿಶ್ವದ ಹಲವಾರು ವಿಶ್ವವಿದ್ಯಾಲಯಗಳು ಪದವಿ ನೀಡಿ ಗೌರವಿಸಿದರೆ, ಕನ್ನಡಿಗರು ರಸ್ತೆಗಳಿಗೆ, ಬಡಾವಣೆಗೆ ಅವರ ಹೆಸರಿಟ್ಟು, ಅವರ ಮೂರ್ತಿ ಸ್ಥಾಪಿಸಿ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.

“ಎಲ್ಲರೂ ಸಿಂಹಾಸನಾಧೀಶರಾಗಿ ಮಹಾರಾಜರಾದರೆ ಇವರು ಅದನ್ನು ತ್ಯಜಿಸಿಯೇ ಮಹಾರಾಜರಾದರು" ಎಂದು ರಾಷ್ಟ್ರಕವಿ ಕುವೆಂಪುರಿಂದ ಹೊಗಳಿಸಿಕೊಂಡಿದ್ದ ಈ ಪುಣ್ಯಜೀವಿ 1974ರ ಸೆಪ್ಟೆಂಬರ್ 23ರಂದು ಬೆಂಗಳೂರಿನಲ್ಲಿ ಇಹಲೋಕ ತ್ಯಜಿಸಿದ್ದರು.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ