ಭಾನುವಾರ, ನವೆಂಬರ್ 7, 2010

'ರಾಮನ್ ಪರಿಣಾಮ'ದ ಸಿ ವಿ ರಾಮನ್


Posted by Picasaಇಂದು ಭಾರತಕ್ಕೆ ಭೌತ ಶಾಸ್ತ್ರದಲ್ಲಿ ಮೊದಲನೆಯ ನೋಬಲ್ ಬಹುಮಾನವನ್ನು ತಂದ ವಿಜ್ಞಾನಿ ಡಾ. ಸಿ ವಿ ರಾಮನ್ ಅವರ ಹುಟ್ಟಿದ ದಿನ. ಅದಕ್ಕೋಸ್ಕರ ಬೆಂಗಳೂರಿನಲ್ಲಿರುವ ಅವರ ಮೂರ್ತಿಗೆ ಫೂಜೆ ಸಲ್ಲಿಸೋಣ ಬನ್ನಿ.......
'ಬೆಳಕಿನ ಕಿರಣಗಳು ಒಂದು ಪಾರದರ್ಶಕ ವಸ್ತುವಿನ ಮೂಲಕ ಹಾಯ್ದು ಹೋಗುವಾಗ ಕಿರಣದ ಸ್ವಲ್ಪ ಭಾಗ ತನ್ನ ಚಲನೆಯ ದಿಕ್ಕನ್ನು ಬದಲಾಯಿಸಿಕೊಳ್ಳುತ್ತವೆ ಮತ್ತು ಹೀಗೆ ಮಣಿದ ಕಿರಣಗಳ ತರಂಗಾಂತರ ಕೂಡ ಬದಲಾಗುತ್ತದೆ' ಎಂದು ಪ್ರತಿಪಾದಿಸುವ ಈ ಸಂಶೋಧನೆ ರಾಮನ್ ಪರಿಣಾಮ ಎಂದೇ ಪ್ರಸಿದ್ಧವಾಗಿದ್ದು ಇದಕ್ಕಾಗಿ ರಾಮನ್ ಅವರಿಗೆ ೧೯೩೦ ರಲ್ಲಿ ನೋಬಲ್ ಪ್ರಶಸ್ತಿಯನ್ನು ಕೊಡಲಾಯಿತು.
ಸಿ ವಿ ರಾಮನ್ ಅವರು ತಿರುವನೈಕಾವಲ್ ಎಂಬ ಹಳ್ಳಿಯಲ್ಲಿ ೧೮೬೬ ನವೆಂಬರ್ ೭ರಂದು ಹುಟ್ಟಿದರು. ಅವರ ತಂದೆ ಚಂದ್ರಶೇಖರ ಐಯ್ಯರ್ ಮತ್ತು ತಾಯಿ ಪಾರ್ವತಿ ಅಮ್ಮ. ರಾಮನ್ ಅವರು ತಮ್ಮ ಮಾದ್ಯಮಿಕ ಶಿಕ್ಷಣವನ್ನು ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿಯೂ, ಕಾಲೇಜು ಶಿಕ್ಷಣವನ್ನು ಆಗಿನ ಮದ್ರಾಸಿನಲ್ಲಿಯೂ ಪಡೆದರು. ೧೯೦೭ ರಲ್ಲಿ ಭೌತಶಾಶ್ತ್ರದಲ್ಲಿ ಎಮ್. ಎ ಪದವಿ ಪಡೆದ ರಾಮನ್ ಕೆಲಕಾಲ ಭಾರತೀಯ ವಿತ್ತ ಇಲಾಖೆಯಲ್ಲಿ ಮುಖ್ಯ ಲೆಖ್ಖ ಪರಿಶೋಧಕರಾಗಿ ಕೆಲಸ ಮಾಡಿದರು. ಆನಂತರ ಭೌತಶಾಸ್ತ್ರದಲ್ಲಿಯ ತಮ್ಮ ವಿಶೇಷ ಆಸಕ್ತಿಯ ಕಾರಣದಿಂದ ಆ ಕೆಲಸವನ್ನು ಬಿಟ್ಟು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪ್ರೊಫ಼ೆಸರ್ ಆಗಿ ನಿಯುಕ್ತರಾದರು. ಅಲ್ಲಿಯೇ ಆಸಕ್ತ ವಿದ್ಯಾರ್ಥಿಗಳೊಂದಿಗೆ ಸೇರಿ ವಿಜ್ಞಾನ ಸಂಘವನ್ನು ಸ್ಥಾಪಿಸಿ ಅದರ ಮೂಲಕ ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. ಅದರ ಫಲ ಶೃತಿಯೇ ’ರಾಮನ್ ಪರಿಣಾಮ’. ೨೮  ಫೆಬ್ರುವರಿ ೧೯೨೮ರಂದು ಈ ಸಂಶೋಧನೆಯನ್ನು ರಾಮನ್ ಅವರು ಜಗಜ್ಜಾಹೀರು ಪಡಿಸಿದರು. ಈ ಸಂಶೋಧನೆಯಲ್ಲಿ ರಾಮನ್ ಅವರ ಸಹೋದ್ಯೋಗಿ ಕೆ. ಎಸ್. ಕೃಷ್ಣನ್ ಅವರ ಕೊಡುಗೆಯೂ ಗಣನೀಯವಾದುದು.
೧೯೩೪ರಲ್ಲಿ ರಾಮನ್ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿ ಸೇರಿ ೧೯೪೮ರಲ್ಲಿ ನಿವೃತ್ತರಾದರು. ಮತ್ತು ಅದೇ ವರ್ಷ ಬೆಂಗಳೂರಿನಲ್ಲಿ ರಾಮನ್ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು. ಹಗಲಿರುಳು ಭೌತಶಾಸ್ತ್ರವನ್ನೆ ಕನವರಿಸುತ್ತಿದ್ದ ರಾಮನ್ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮತ್ತು ತಮ್ಮ ರಾಮನ್ ಸಂಶೋಧನಾ ಕೇಂದ್ರದಲ್ಲಿ ಬೆಳಕಿನ ಬಗ್ಗೆ ಮತ್ತು ದ್ವನಿಯ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಿದರು. ಭಾರತೀಯ ಸಂಗೀತದಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದ ರಾಮನ್ ಭಾರತೀಯ ಸಂಗೀತ ವಾದ್ಯಗಳಾದ ತಬಲಾ ಮತ್ತು ಮೃದಂಗಗಳು ಹೊರಡಿಸುವ ದ್ವನಿಗಳ ಬಗ್ಗೆಯೂ ಅಭ್ಯಾಸ ಮತ್ತು ಸಂಶೋಧನೆ ಮಾಡಿದ್ದರು.
ರಾಮನ್ ಅವರ ಈ ಸಾಧನೆಗಳಿಗಾಗಿ ೧೯೩೦ ರ ನೋಬಲ್ ಪ್ರಶಸ್ತಿಯಲ್ಲದೇ, ೧೯೨೯ ರಲ್ಲಿ ನೈಟ್‌ಹುಡ್ ಪದವಿಯನ್ನು ಮತ್ತು ೧೯೫೪ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಕೊಡಲಾಯಿತು. ಅವರಿಗೆ ಕೊಡಲ್ಪಟ್ಟ ನೋಬಲ್ ಪ್ರಶಸ್ತಿಯ ಪದಕವನ್ನು ಈಗ ರಾಮನ್ ಸಂಶೋಧನಾ ಕೇಂದ್ರದ  ಸಂಗ್ರಹಾಲಯದಲ್ಲಿ ಇಡಲಾಗಿದೆ.
ಅವರು ರಾಮನ್ ಪರಿಣಾಮ ಕಂಡುಹಿಡಿದ ಫೆಬ್ರುವರಿ ೨೮ನ್ನು ಭಾರತದ ತುಂಬೆಲ್ಲ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತಿದೆ.
ರಾಮನ್ ಅವರು ನವೆಂಬರ್ ೨೭, ೧೯೭೦ರಂದು ತೀರಿಕೊಂಡರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ