ಭಾನುವಾರ, ಜನವರಿ 31, 2021

ವರಕವಿ ದ. ರಾ. ಬೇಂದ್ರೆ.

(ಮೂರ್ತಿ ಇರುವ ಸ್ಥಳ : ಆಲೂರು ವೆಂಕಟರಾವ್ ವೃತ್ತ, ಮಲ್ಲಿಕಾರ್ಜುನ ಮನ್ಸೂರ ಕಲಾಭವನ ಆವರಣ, ಧಾರವಾಡ.)

(ಇನ್ನೊಂದು ಮೂರ್ತಿ: ಜಯನಗರ ೩ನೇ ಬ್ಲಾಕ್, ಬೆಂಗಳೂರು)

ಇಂದು ಕವಿ ದಿನ, ವರಕವಿಯೆಂದು ಪ್ರಸಿದ್ಧರಾದ ಅಂಬಿಕಾತನಯದತ್ತರೆಂಬ ದ. ರಾ. ಬೇಂದ್ರೆಯವರ ಜನುಮ ದಿನ. ಅವರ ಧಾರವಾಡದ ಆಡುಮಾತಿನ ಮೋಡಿ ಅಪೂರ್ವ. ಅವರ ಕವನಗಳಲ್ಲಿ ನಾದ ಮಾಧುರ್ಯ,ಲಯ ಚಾತುರ್ಯ ಅತಿ ವಿಶಿಷ್ಟ.






ಕುಣಿಯೋಣು ಬಾರ
ಕುಣಿಯೋಣು ಬಾರ
ತಾಳ್ಯಾಕ ತಂತ್ಯಾಕ
ರಾಗದ ಚಿಂತ್ಯಾಕ
ಹೆಜ್ಯಾಕ, ಗೆಜ್ಯಾಕ
ಕುಣಿಯೋಣು ಬಾರ


ಇದು ಅವರ ಕುಣಿಯೋಣು ಬಾರ ಕವನದ ಕೆಲ ಸಾಲುಗಳು.


ಪಾತರಗಿತ್ತಿ ಪಕ್ಕ
ನೋಡಿದೆನ ಪಕ್ಕ
ಹಸಿರು ಹಚ್ಚಿ ಚುಚ್ಚಿ
ಮೇಲಕರಿಸಿಣ ಹಚ್ಚಿ॒॒

ಇಂತಹ ಮಕ್ಕಳ ಕವನಗಳನ್ನು ಬರೆದ ಬೇಂದ್ರೆ,


ರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ.

ಹೀಗೆ ಕೇವಲ ಆರು ಶಬ್ದಗಳಲ್ಲಿ ಜೀವನದ ಅರ್ಥಗರ್ಭಿತ ವ್ಯಾಖ್ಯಾನವನ್ನು ಮಾಡಿ ದಾರ್ಶನಿಕತೆಯನ್ನು ಮೆರೆದವರು.

ದ.ರಾ. ಬೇಂದ್ರೆ ಹುಟ್ಟಿದ್ದು ೧೮೯೬ ರ ಜನೇವರಿ ೩೧ ರಂದು ಧಾರವಾಡದಲ್ಲಿ, ತಂದೆ ರಾಮಚಂದ್ರ ಬೇಂದ್ರೆ ತಾಯಿಅಂಬಿಕೆ.ಅವರ ಜನ್ಮದಿನವಾದ ಇಂದು ಕವಿದಿನವಾಗಿ ಆಚರಿಸಲಾಗುತ್ತಿದೆ.

ಬೇಂದ್ರೆಯವರ ಕವನಸಂಕಲನಗಳಲ್ಲಿ ಪ್ರಮುಖವಾದವು ಗರಿ, ಮೂರ್ತಿ ಹಾಗೂ ಕಾಮಕಸ್ತೂರಿ, ಇದೋ ನಭೋವಾಣಿ ಗಂಗಾವತರಣ, ಅರಳು ಮರಳು, ನಾಕುತಂತಿ, ಮೇಘದೂತ. ಅವರು ನಾಟಕಗಳನ್ನು ಬರೆದಿದ್ದು ಹುಚ್ಚಾಟಗಳು, ಹೊಸ ಸಂಸಾರ ಮತ್ತು ಇತರ ನಾಟಕಗಳು ಪ್ರಮುಖವಾದವು. ಅವರು ಇಂಗ್ಲೀಷನಿಂದ ಅನುವಾದಿಸಿದ ಅರವಿಂದರ ಭಾರತೀಯ ಪುನರ್ಜನ್ಮ ಮತ್ತು ರಾನಡೆಯವರ ಉಪನಿಷದ್ರಹಸ್ಯಗಳೂ ಅಮೂಲ್ಯ ಗ್ರಂಥಗಳು.

ಪ್ರಶಸ್ತಿ/ ಸನ್ಮಾನಗಳು:
೧೯೪೩-ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮-ಅರಳು ಮರಳು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೪-ನಾಕುತಂತಿಗೆ ಜ್ಞಾನಪೀಠ ಪ್ರಶಸ್ತಿ
ಮೈಸೂರು ವಿ ವಿ ಕರ್ನಾಟಕ ವಿ ವಿ ಮತ್ತು ಕಾಶಿ ವಿದ್ಯಾಪೀಠದವತಿಯಿಂದ ಗೌರವ ಡಾಕ್ಟರೇಟ್

ಇವರ ಕವನಗಳನ್ನು ಕನ್ನಡ ಚಿತ್ರರಂಗಗಳಲ್ಲಿಯೂ ಬಳಸಿಕೊಳ್ಳಲಾಯಿತು ಅವುಗಳಲ್ಲಿ ಪ್ರಮುಖವಾದವು ’ಉತ್ತರದ್ರುವದಿಂ ದಕ್ಷಿಣ ದ್ರುವಕೂ’, ’ಮೂಡಲಮನೆಯ ಮುತ್ತಿನ ನೀರಿನ’ ಮುಂತಾದವು.

ದ ರಾ ಬೇಂದ್ರೆ ಕನ್ನಡ ಸಾರಸ್ವತ ಲೋಕ ಕಂಡ ಅಪರೂಪದ ಕವಿ. ಕನ್ನಡಿಗರನ್ನು ಕಾವ್ಯಲೋಕದ ರಸಯಾತ್ರೆಗೆ ಕೊಂಡೊಯ್ದ ಕವಿ, ತಮ್ಮ ವೈಯಕ್ತಿಕ ಬದುಕಿನಲ್ಲಿ ಕಷ್ಟ- ಕಾರ್ಪಣ್ಯಗಳಿದ್ದರೂ ರಸಿಕರಿಗೆ ಮಾತ್ರ ಕಾವ್ಯರಸದ ಸಿಹಿಯನ್ನು ಉಣಿಬಡಿಸಿದ ಕನ್ನಡ ಕಾವ್ಯಲೋಕದ ಗಾರುಡಿಗ ನಮ್ಮಿಂದ ಮರೆಯಾದದ್ದು ೨೬ ಅಕ್ಟೋಬರ್ ೧೯೮೧ ರಂದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ